ಮಂಗಳೂರು:- ಕರಾವಳಿ ಕರ್ನಾಟಕವನ್ನು ಸಾಮಾನ್ಯವಾಗಿ ಬಿಜೆಪಿ ಭದ್ರಕೋಟೆಯಂದೇ ಹೇಳಲಾಗುತ್ತದೆ. ಕೆಲವು ವರ್ಷಗಳಿಂದ ಸಣ್ಣ ಪುಟ್ಟ ಚುನಾವಣೆಗಳಿಂದ ಹಿಡಿದು ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಹಿಂದುತ್ವದ ಅಜೆಂಡಾದ ಮೇಲೆ ಬಿಜೆಪಿ ಗೆದ್ದುಕೊಂಡು ಬರುತ್ತಿದೆ.
ಕಳೆದ 2018ರ ವಿಧಾನ ಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿರಲಿಲ್ಲ. ಆ ಮಟ್ಟಿಗೆ ಮಂಗಳೂರಿನಲ್ಲಿ ಕೇಸರಿ ಪಡೆ ಗಟ್ಟಿಮುಟ್ಟಾಗಿದೆ. ಆದರೆ, ಸ್ಥಳೀಯ ಚುನಾವಣೆಯೊಂದರಲ್ಲಿ ಬಿಜೆಪಿ ಅಭ್ಯರ್ಥಿ ಒಂದೇ ಒಂದು ಮತ ಪಡೆಯಲು ಸಾಧ್ಯವಾಗದಿರುವ ಘಟನೆ ನಡೆದಿದೆ.
YES…ಮೊನ್ನೆ ನಡೆದ ಕಡಬ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರೇಮಾ ಎನ್ನುವರು ಒಂದೂ ವೋಟ್ ಪಡೆಯದೇ ಅಪರೂಪದ ಮತ್ತು ಅವಮಾನಕರ ಸೋಲು ಕಂಡಿದೆ. ಕಡಬ ಪಟ್ಟಣ ಪಂಚಾಯಿತಿಯ ವಾರ್ಡ್ ನಂಬರ್ 1ರಲ್ಲಿ ಬಿಜೆಪಿಯಿಂದ ಪ್ರೇಮಾ ಎನ್ನುವರು ಸ್ಪರ್ಧೆ ಮಾಡಿದ್ದರು. ಇನ್ನು ಕಾಂಗ್ರೆಸ್ ನಿಂದ ಮುಸ್ಲಿಂ ಸಮುದಾಯದ ತಮನ್ನಾ ಜನೀಬ್ ಸ್ಪರ್ಧಿಸಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಮತ್ತೋರ್ವ ಮುಸ್ಲಿಂ ಮಹಿಳೆ ಜೈನಾಬಿ ಕಣಕ್ಕಳಿದಿದ್ದರು. ಆದರೆ, ವಾರ್ಡ್ ನ ಒಟ್ಟು 418 ಮತಗಳ ಪೈಕಿ ಬಿಜೆಪಿಯ ಪ್ರೇಮಾಗೆ ಒಂದೇ ಒಂದು ವೋಟ್ ಬಿದ್ದಿಲ್ಲ. ಇದರಿಂದ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.
ಕಾಂಗ್ರೆಸ್ ನ ತಮನ್ನಾ 201 ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ತಮನ್ನಾ ತಮ್ಮ ಸಮೀಪ ಸ್ಪರ್ಧಿ ಸ್ವತಂತ್ರ ಅಭ್ಯರ್ಥಿ ಜೈನಾಬಿ ಅವರನ್ನು 62 ಮತಗಳ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಕಣದಲ್ಲಿದ್ದ ಎಸ್ಡಿಪಿಐ ಅಭ್ಯರ್ಥಿ 74 ಮತ ಪಡೆಯುವುದರಲ್ಲಿ ಯಶಸ್ವಿಯಾಗಿದರೆ ಬಿಸಿಎ(ಮಹಿಳೆ) ಮೀಸಲಾಗಿರುವ ವಾರ್ಡ್ ನಲ್ಲಿ ಒಟ್ಟು ನಾಲ್ಕು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ವಾರ್ಡ್ ಸಂಖ್ಯೆ 1ರ ಮತದಾರರಲ್ಲದ ಬಿಜೆಪಿಯ ಪ್ರೇಮಾ ಅವರಿಗೆ ಒಂದೇ ಒಂದು ಮತ ಪಡೆಯಲು ಸಾಧ್ಯವಾಗಿಲ್ಲ. ಅಚ್ಚರಿ ಅಂದರೆ, ಮುಸ್ಲಿಂ ಅಭ್ಯರ್ಥಿಗಳ ನಡುವೆ ಮತಗಳು ಹಂಚಿ ಬಿಜೆಪಿಯ ಪ್ರೇಮಾಗೆ ಪ್ಲಸ್ ಆಗಬೇಕಿತ್ತು. ಆದರೆ, ಲೆಕ್ಕಾಚಾರ ಬುಡಮೇಲಾಗಿದ್ದು, ಬಿಜೆಪಿ ಹಿನ್ನಡೆಯಾಗಿದೆ.
ಇನ್ನು ಇದೇ ಪ್ರೇಮಾ ಅವರು 1ನೇ ವಾರ್ಡ್ ಮಾತ್ರವಲ್ಲದೇ ತಾವು ವಾಸಿಸುವ 6ನೇ ವಾರ್ಡ್ ನಿಂದ ಸ್ಪರ್ಧೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋಲುಕಂಡಿದ್ದಾರೆ. ಕಾಂಗ್ರೆಸ್ ನ ನೀಲಾವತಿ ಶಿವರಾಮ್ ವಿರುದ್ಧ ಪ್ರೇಮಾ 177 ಮತಗಳಿಂದ ಪರಾಭವಗೊಂಡಿದ್ದಾರೆ. ನೀಲಾವತಿ 314 ಮತಗಳನ್ನು ಗೆದ್ದು ಬೀಗಿದ್ದಾರೆ. ಇದರೊಂದಿಗೆ ಬಿಜೆಪಿಯಿಂದ ಎರಡ ವಾರ್ಡ್ ಗಳಿಂದ ಕಣಕ್ಕಿಳಿದಿದ್ದ ಪ್ರೇಮಾ ಎರಡಲ್ಲೂ ಸೋಲನುಭವಿಸಿದ್ದಾರೆ.
ಈ ಹೀನಾಯ ಸೋಲಿನ ಬಗ್ಗೆ ಬಿಜೆಪಿ ಮುಖಂಡರು ಪ್ರತಿಕ್ರಿಯಿಸಿದ್ದು, ಈ ಪ್ರದೇಶವು ಮುಸ್ಲಿಂ ಬಹುಸಂಖ್ಯಾತರನ್ನು ಒಳಗೊಂಡಿರುವುದರಿಂದ ಸಾಮಾನ್ಯವಾಗಿ ಅಲ್ಲಿ ಬಿಜೆಪಿಗೆ ಕಡಿಮೆ ಬೆಂಬಲವಿದೆ ಎಂದು ಸಮಜಾಯಿಷಿ ನೀಡಿದರು. ವಾರ್ಡ್ ಮುಸ್ಲಿಂ ಭದ್ರಕೋಟೆಯಾಗಿರಬಹುದು. ಆದರೆ, ಅಲ್ಲಿ ಒಬ್ಬೇ ಒಬ್ಬ ಬಿಜೆಪಿಯವರ ಮನೆ ಇಲ್ವಾ? ಒಬ್ಬ ಕಾರ್ಯಕರ್ತ ಇರಲಿಲ್ವಾ ಎನ್ನುವ ಚರ್ಚೆಗಳು ನಡೆಯುತ್ತಿವೆ.
ಕಡಬ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದ್ದು, ಒಟ್ಟು 13 ಸ್ಥಾನಗಳ ಪೈಕಿ ಕಾಂಗ್ರೆಸ್ 8 ಸ್ಥಾನ ಗೆದ್ದು ಅಧಿಕಾರದ ಗದ್ದುಗೆ ಏರಿದೆ. ಇನ್ನು ಬಿಜೆಪಿ 5 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಈ ಫಲಿತಾಂಶ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಸ ಭರವಸೆ ಮೂಡಿಸಿದೆ.
ಕಡಬ ಪಟ್ಟಣ ಪಂಚಾಯತ್ನಲ್ಲಿ ನಡೆದ ಚುನಾವಣೆಯಲ್ಲಿ 13 ಸ್ಥಾನಗಳಲ್ಲಿ 8 ಸ್ಥಾನವನ್ನು ಕಾಂಗ್ರೆಸ್ ಗೆಲ್ಲುವ ಮೂಲಕ ಮತದಾರರು ಗ್ಯಾಂರಂಟಿ ಯೋಜನೆಗಳಿಗೆ ಮತ್ತು ಕಾಂಗ್ರೆಸಿನ ಜನಪರ ಯೋಜನೆಗಳಿಗೆ ಬೆಂಬಲಿಸಿದ್ದಾರೆ. ಈ ಚುನಾವಣೆಯು ಮುಂದಿನ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗೆ ಒಂದು ದಿಕ್ಸೂಚಿಯಾಗಿದ್ದು, ಈ ಚುನಾವಣೆ ಮೂಲಕ ಕಾರ್ಯಕರ್ತರು ಉತ್ಸಾಹದಿಂದ ಮುಂದಿನ ಚುನಾವಣೆ ಎದುರಿಸಲು ಒಂದು ಶಕ್ತಿಯನ್ನು ಪಡೆದಿದ್ದಾರೆ ಹರ್ಷ ವ್ಯಕ್ತಪಡಿಸಿದ್ದಾರೆ.
Leave feedback about this