ಬಾಗಲಕೋಟೆ:- ಮಾಜಿ ಸಚಿವ ಎಚ್.ವೈ ಮೇಟಿ ಅವರ ನಿಧನದಿಂದ ತೆರವಾದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ನಿಗದಿಯಾಗದಿದ್ದರೂ ಮೇಟಿ ಕುಟುಂಬದೊಳಗೆ ಟಿಕೆಟ್ಗಾಗಿ ಪೈಪೋಟಿ ಆರಂಭಗೊಂಡಿದೆ.
ಬಾಗಲಕೋಟೆ ಶಾಸಕರಾಗಿದ್ದ ಎಚ್.ವೈ.ಮೇಟಿ ಅವರ ನಿಧನದಿಂದ ತೆರವಾಗಿರುವ ಸ್ಥಾನದಲ್ಲಿ ಅವರ ಕುಟುಂಬದಿಂದ ಮಾತ್ರ ಪೈಪೋಟಿ ಕಂಡು ಬಂದಿದೆ. ಮೇಟಿ ಅವರ ಮೊದಲ ಪುತ್ರ ಮಲ್ಲಿಕಾರ್ಜುನ ಮೇಟಿ, ಮತ್ತೊಬ್ಬ ಪುತ್ರ ಉಮೇಶ್ ಮೇಟಿ ಹಾಗೂ ಜಿ.ಪಂ ಮಾಜಿ ಅಧ್ಯಕ್ಷೆಯೂ ಆದ ಪುತ್ರಿ ಬಾಯಕ್ಕ ಮೇಟಿ ಅವರೂ ಟಿಕೆಟ್ ಬಯಸಿದ್ದಾರೆ. ಈ ಪೈಕಿ ಮೊದಲ ಪುತ್ರ ಮಲ್ಲಿಕಾರ್ಜುನ ಮೇಟಿ ಅವರಿಗೆ ಟಿಕೆಟ್ ಬಹುತೇಕ ಖಚಿತ ಎನ್ನಲಾಗುತ್ತಿದೆ. ಕಾಂಗ್ರೆಸ್ ನಾಯಕತ್ವ ಹಾಗೂ ಹೈಕಮಾಂಡ್ ಈ ವಿಚಾರದಲ್ಲಿ ಒಮ್ಮತ ಮೂಡಿದ್ದು, ಕೆಲಸ ಆರಂಭಿಸುವಂತೆ ಪರೋಕ್ಷ ಸಂದೇಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಮತ್ತೊಬ್ಬ ಪುತ್ರ ಹಾಗೂ ಪುತ್ರಿ ಇನ್ನೂ ಲಾಬಿ ಬಿಟ್ಟಿಲ್ಲ, ವಿಶೇಷವಾಗಿ ಪುತ್ರಿ ಬಾಯಕ್ಕ ಮೇಟಿ ತೀವ್ರ ಲಾಬಿ ನಡೆಸಿದ್ದಾರೆ. ಈ ನಡುವೆ ದಿವಂಗತ ಮೇಟಿ ಮಕ್ಕಳ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಾಕಿ ಮುಂದಿನ ಶಾಸಕರು ಯಾರಾಗಬೇಕೆಂದು ವೋಟಿಂಗ್ ನಡೆಸುತ್ತಿರುವುದು ಕುತೂಹಲ ಮೂಡಿಸಿದೆ.
Leave feedback about this